Monday, 8 October 2012

ಅವರವರ ಭಾವಕ್ಕೆ-ಅವರವರ ಭಕುತಿಗೆ

ಕೆಲವೊಂದು ಭಾವನೆಗಳು ನನ್ನನ್ನು ತೀವ್ರವಾಗಿ ಕಾಡುತ್ತವೆ

.ನಾನು ಒಮ್ಮೆ ನಮ್ಮ ಮನೆಯ ಹೂ ತೋಟದಲ್ಲಿ ಒಂದು ಜಾತಿಯ  ಕಳ್ಳಿ ಗಿಡವನ್ನು ಬೆಳೆಸಿದ್ದೆ .ಅದು ಕುಂಡದ ತುಂಬಾ ಹೂವುಗಳನ್ನು ಬಿಟ್ಟು ಅಂದವಾಗಿ ಕಂಗೊಳಿಸುತ್ತಿತ್ತು .ಒಂದು ದಿನ ನಮ್ಮ ಮನೆಯ ಕೆಲಸದವಳು "ಅಮ್ಮಾ, ಈ ಗಿಡ ಮಾಡಿದವರ ಮನೆಯ ಯಜಮಾನನಿಗೆ ಅಪಾಯವಂತೆ" ಎಂದು ಅರುಹಿದಳು .ಅದು ನನ್ನನ್ನು ತುಂಬಾ ಚಿಂತೆಗೀಡು ಮಾಡಿತು.ಮೂಡ ನಂಬಿಕೆಯೆಂದು ತಿಳಿದರೂ ನಾನು ಅದನ್ನು ಕಡೆಗಣಿಸ ಲಾರದೇ  ಹೋದೆ .ಯಾಕೆ ಗೊತ್ತಾ ? ಒಂದು ವೇಳೆ ಅದರಿಂದ ನನ್ನವರಿಗೆನಾದರೂ ಅಪಾಯವಾದರೆ , ಅದು ಕಾಕತಾಳೀಯವೇ ಆದರೂ ,ನನ್ನವರ ಬಗ್ಗೆ ನನ್ನ ನಿಷ್ಠೆ ಕಡಿಮೆಯಾದಂತಲ್ಲವೇ ? ಕೇವಲ ಒಂದು ಹೂವಿನ ಗಿಡಕ್ಕಾಗಿ ನಾನು ಯಾಕೆ ಅಂತಹ ರಿಸ್ಕ್ ತೆಗೆದುಕೊಳ್ಳಬೇಕು ?ಯಾಕೆಂದರೆ ಇದು ಪ್ರಯೋಗ ಮಾಡುವ ವಿಶಯವಲ್ಲವಲ್ಲ .

ಏನೆಲ್ಲಾ ಚಿಂತಿಸಿ ಚಿಂತಿಸಿ ಕೊನೆಗೆ ಆ ಗಿಡವನ್ನು ಕೆಲಸದವಳ ಹತ್ತಿರ ಯಾರಿಗಾದರು" ಹೀಗೆ ಅಂತ ಹೇಳಿ" ಕೊಡು ಎಂದು ಕೊಟ್ಟುಬಿಟ್ಟೆ .ಅವರು ಯಾರೋ "ಅಯ್ಯೋ ಇಷ್ಟು ಚಂದದ ಗಿಡ ,ಅದೆಲ್ಲ ಬರಿ ಸುಳ್ಳು " ಎಂದು ತಗೊಂಡ್ರಂತೆ! ಆದರೆ ನನಗನಿಸಿದ್ದು "ಮೂಡ ನಂಬಿಕೆಯಾದರೂ ,ಅವರವರ ಭಾವಕ್ಕೆ, ಅವರವರ ಭಕುತಿಗೆ ಅನುಗುಣವಾಗಿ ,ಒಂದೊಂದು ವಿಷಯ ಪರಿಗಣಿಸಲ್ಪಡುತ್ತದೆ (ವಿದ್ಯಾವಂತರು-ಅವಿದ್ಯಾವಂತರು ಎಂಬ ಭೇದವಿಲ್ಲದೇ !)

ಕಥೆಯಾಗದ ಕಥೆಗಳು

ನನ್ನ ಮನಸ್ಸಿಗೆ ಬಂದ ಅನೇಕ ವಿಷಯಗಳನ್ನು ಕಥೆಗಳಾಗಿ ಪರಿವರ್ತಿಸಿದ್ದೇನಾದರೂ, ಈ ವರೆಗೆ ಅವು ಯಾವವೂ ಕಥೆಯಾಗಿ ಯಾರೆದುರಿಗೂ ಬರಲಿಲ್ಲ.

ಅನಿವಾರ್ಯವಾಗಿ, ಜೀವನೋಪಾಯಕ್ಕಾಗಿ  ಪಟ್ಟಣಕ್ಕೆ ತೆರಳಿದ ಮಕ್ಕಳ ತಂದೆ - ತಾಯಂದಿರ ಬವಣೆಯ ಬದುಕಿನ ಬಗ್ಗೆ, ಅಥವಾ ಪಟ್ಟಣಕ್ಕೆ ಹೋದ ಮಕ್ಕಳ ಬೆನ್ನಿಗೆ ಬಿದ್ದು, ತಾವೂ ಪಟ್ಟಣ ಸೇರಿ, ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಅಂತರ ಪಿಶಾಚಿಯಾದವರ ಬಗ್ಗೆ ಬರೆಯುವ ವಿಚಾರ ಮಾಡುತ್ತೇನೆ.ಆದರೆ ಮರುಕ್ಷಣ ಅದು ನಮ್ಮಲ್ಲೇ ಯಾರಾದರೊಬ್ಬರ ಕಥೆಯಾಗಿ,ಅವರ ಮನ ನೋಯಬಹುದೆಂದು ಕೈಬಿದುತ್ತೇನೆ.ಆದರೆ ಸರಿಯಾಗಿ ಒಮ್ಮೆ ಯೋಚಿಸಿದರೆ, ನಾವು ಬರೆಯುವ ಕಥೆ ಹೇಗಿರಬೇಕು ? ಅದು ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡುವಂತಿರಬೇಕು ತಾನೇ? ಹಾಗಾದಲ್ಲಿ ನಾವು ಏನನ್ನೇ ಬರೆದರೂ ಅದು ಒಂದಲ್ಲಾ ಒಂದು ರೀತಿಯಲ್ಲಿ ಯಾರನ್ನಾದರೂ ತಟ್ಟದೆ ಇರದು.ಆದರೂ ಯಾಕೋ ಬರೆಯುವ ಧೈರ್ಯ ಬರದು .ಆ ಧೈರ್ಯಕ್ಕಾಗಿ ಕಾಯುತ್ತಿದ್ದೇನೆ .

ಹೀಗೆ ಎಷ್ಟೋ ವಿಷಯಗಳು ಮನದ ಮುಂದೆ ಹಾಯ್ದು ಮರೆಯಾಗುತ್ತಿರುತ್ತವೆ.ಎಲ್ಲವು ಕತೆಯಾಗದ ಕಥೆಯಾಗಿ ಉಳಿದುಬಿಡುತ್ತವೆ.