Tuesday, 21 July 2015

ಮಕ್ಕಳು ಹೀಗೇಕೆ  ನಮ್ಮನ್ನು ಇಷ್ಟು ಪ್ರೀತಿಸುತ್ತಾರೆ ?

ಸಾಮಾನ್ಯವಾಗಿ ಎಲ್ಲರೂ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದನ್ನೇ ಪದೇ ಪದೇ ಹೇಳುತ್ತಿರುತ್ತಾರೆ . ಆದರೆ ಹೀಗೇ ಒಂದು ಕ್ಷಣ ಯೋಚಿಸಿದರೆ .... ನಾವು ಹೆತ್ತವರು ಮಕ್ಕಳಿಗಾಗಿ ಏನು ಮಾಡಿರುತ್ತೇವೆ?
ಒಂದು ಗಂಡ ಹೆಂಡತಿಗೆ ಮಕ್ಕಳನ್ನು ಹೊಂದುವುದೇ ಒಂದು ಸಂಭ್ರಮದ ವಿಚಾರ . ಆಮೇಲೆ ಮಕ್ಕಳ ಆಟ ಪಾಟ ನೋಡಿ ನಲಿಯುವುದು ಸಾರ್ಥಕತೆಯ ಪರಮಾನಂದ ಮುಂದೆ ವಿದ್ಯಾಭ್ಯಾಸದ ಅವಧಿಯಲ್ಲೂ ಅವರ ನೋವು ನಲಿವಿನ ಅನುಭವದೊಂದಿಗೆ ನಾವೂ ಅವರಂತೆಯೇ ಆಗಿ ನಮಗೆ ಜೀವನ ಸರಿದಿದ್ದೇ ಗೊತ್ತಾಗುವುದಿಲ್ಲ. ಹೀಗೆ ಮಕ್ಕಳು ನಮ್ಮ ಜೀವನವನ್ನು ಸಂತೂಷಮಯವಾಗಿಸಲು ದೇವರು ನಮಗೆ ಕೊಟ್ಟ ವರ. ಇಂತಿರುವಾಗ ಮಕ್ಕಳು ತಂದೆ ತಾಯಿಯರ ಋಣ ತೀರಿಸುವ ಮಾತೆಲ್ಲಿಯದು?

ಪ್ರತಿಯೊಬ್ಬರೂ ಅವರವರ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ಅದರಿಂತ ಬೇರೆ ಏನು ಬೇಕು?

ಆದರೂ ಮಕ್ಕಳು ನಮಗೆ ನೀಡುವ ಮುದವನ್ನು ಹಿರಿಯರಾದ ನಾವು ಅವರಿಗೆ ನೀಡಲಾರೆವು ಎಂಬುದೀ ನನ್ನ ಅನಿಸಿಕೆ. ಈ ಜನ್ಮದಲ್ಲಿ ನಾವಿಂದು ಮುಸ್ಸಂಜೆಯ ಹಾದಿಯಲ್ಲಿದ್ದೇವೆ. ಇನ್ನು ನಾವು ಅವರಿಂದ ಸೇವೆ ಮಾಡಿಸಿಕೊಳ್ಳಬಹುದೇ ವಿನಃ ನಮ್ಮಿಂದ ಹೆಚ್ಚೇನೂ ಮಾ ಡಲಾಗದು.

ಹಾಗಾಗಿ ಮುಂದಿನ ಜನ್ಮದಲ್ಲಿ ಅವರ ಮಕ್ಕಳಾಗಿ ಹುಟ್ಟಿ ಅವರ ಸೇವೆ ಮಾಡಿ ಖುಶಿ ಪಡಬಹುದೇನೋ

ಹೆತ್ತವರನ್ನು ಪ್ರೀತಿಸುವ ಮಕ್ಕಳೇ ನಿಮಗಿದೋ ಅಮ್ಮನ ಅಕ್ಕರೆಯ ಶುಭ ಹಾರೈಕೆಗಳು 

Friday, 1 February 2013

ಪ್ರೀತಿ ನೀಡುವ ಖುಷಿ

 ಮನುಷ್ಯ ಮನುಷ್ಯರ ನಡುವಿನ ಪ್ರೀತಿಗೆ ಅಗಾಧ ಶಕ್ತಿಯಿದೆ.ಯಾರಾದರೂ ನಮ್ಮನ್ನು ಪ್ರೀತಿಸುತ್ತಾರೆ,ಗುರುತಿಸುತ್ತಾರೆ ಎಂದರೆ ಅದು ನಮಗೆ ಅತಿಯಾದ ಖಷಿ ನೀಡುತ್ತದೆ ಮತ್ತು ಅದಕ್ಕೆ ಸಂಖ್ಯಗಳ ಮಿತಿಯಿಲ್ಲ ಎಂಬುದು ಮತ್ತೂ ಆಶ್ಚರ್ಯಕರ! ಮನುಷ್ಯನಿಗೆ ಬೇರೆ ಬೇರೆ ರೀತಿಯ (ಅಣ್ಣ-ತಂಗಿ, ಮಗ-ಮಗಳು ಹೀಗೆ )ಎಷ್ಟೋ ಪ್ರೀತಿಗಳನ್ನು ನಿಭಾಯಿಸುವ ಅನಂತ ಶಕ್ತಿಯನ್ನು ಕೊಟ್ಟ ದೇವರಿಗೆ ಅನಂತ ವಂದನೆಗಳು

Monday, 8 October 2012

ಅವರವರ ಭಾವಕ್ಕೆ-ಅವರವರ ಭಕುತಿಗೆ

ಕೆಲವೊಂದು ಭಾವನೆಗಳು ನನ್ನನ್ನು ತೀವ್ರವಾಗಿ ಕಾಡುತ್ತವೆ

.ನಾನು ಒಮ್ಮೆ ನಮ್ಮ ಮನೆಯ ಹೂ ತೋಟದಲ್ಲಿ ಒಂದು ಜಾತಿಯ  ಕಳ್ಳಿ ಗಿಡವನ್ನು ಬೆಳೆಸಿದ್ದೆ .ಅದು ಕುಂಡದ ತುಂಬಾ ಹೂವುಗಳನ್ನು ಬಿಟ್ಟು ಅಂದವಾಗಿ ಕಂಗೊಳಿಸುತ್ತಿತ್ತು .ಒಂದು ದಿನ ನಮ್ಮ ಮನೆಯ ಕೆಲಸದವಳು "ಅಮ್ಮಾ, ಈ ಗಿಡ ಮಾಡಿದವರ ಮನೆಯ ಯಜಮಾನನಿಗೆ ಅಪಾಯವಂತೆ" ಎಂದು ಅರುಹಿದಳು .ಅದು ನನ್ನನ್ನು ತುಂಬಾ ಚಿಂತೆಗೀಡು ಮಾಡಿತು.ಮೂಡ ನಂಬಿಕೆಯೆಂದು ತಿಳಿದರೂ ನಾನು ಅದನ್ನು ಕಡೆಗಣಿಸ ಲಾರದೇ  ಹೋದೆ .ಯಾಕೆ ಗೊತ್ತಾ ? ಒಂದು ವೇಳೆ ಅದರಿಂದ ನನ್ನವರಿಗೆನಾದರೂ ಅಪಾಯವಾದರೆ , ಅದು ಕಾಕತಾಳೀಯವೇ ಆದರೂ ,ನನ್ನವರ ಬಗ್ಗೆ ನನ್ನ ನಿಷ್ಠೆ ಕಡಿಮೆಯಾದಂತಲ್ಲವೇ ? ಕೇವಲ ಒಂದು ಹೂವಿನ ಗಿಡಕ್ಕಾಗಿ ನಾನು ಯಾಕೆ ಅಂತಹ ರಿಸ್ಕ್ ತೆಗೆದುಕೊಳ್ಳಬೇಕು ?ಯಾಕೆಂದರೆ ಇದು ಪ್ರಯೋಗ ಮಾಡುವ ವಿಶಯವಲ್ಲವಲ್ಲ .

ಏನೆಲ್ಲಾ ಚಿಂತಿಸಿ ಚಿಂತಿಸಿ ಕೊನೆಗೆ ಆ ಗಿಡವನ್ನು ಕೆಲಸದವಳ ಹತ್ತಿರ ಯಾರಿಗಾದರು" ಹೀಗೆ ಅಂತ ಹೇಳಿ" ಕೊಡು ಎಂದು ಕೊಟ್ಟುಬಿಟ್ಟೆ .ಅವರು ಯಾರೋ "ಅಯ್ಯೋ ಇಷ್ಟು ಚಂದದ ಗಿಡ ,ಅದೆಲ್ಲ ಬರಿ ಸುಳ್ಳು " ಎಂದು ತಗೊಂಡ್ರಂತೆ! ಆದರೆ ನನಗನಿಸಿದ್ದು "ಮೂಡ ನಂಬಿಕೆಯಾದರೂ ,ಅವರವರ ಭಾವಕ್ಕೆ, ಅವರವರ ಭಕುತಿಗೆ ಅನುಗುಣವಾಗಿ ,ಒಂದೊಂದು ವಿಷಯ ಪರಿಗಣಿಸಲ್ಪಡುತ್ತದೆ (ವಿದ್ಯಾವಂತರು-ಅವಿದ್ಯಾವಂತರು ಎಂಬ ಭೇದವಿಲ್ಲದೇ !)

ಕಥೆಯಾಗದ ಕಥೆಗಳು

ನನ್ನ ಮನಸ್ಸಿಗೆ ಬಂದ ಅನೇಕ ವಿಷಯಗಳನ್ನು ಕಥೆಗಳಾಗಿ ಪರಿವರ್ತಿಸಿದ್ದೇನಾದರೂ, ಈ ವರೆಗೆ ಅವು ಯಾವವೂ ಕಥೆಯಾಗಿ ಯಾರೆದುರಿಗೂ ಬರಲಿಲ್ಲ.

ಅನಿವಾರ್ಯವಾಗಿ, ಜೀವನೋಪಾಯಕ್ಕಾಗಿ  ಪಟ್ಟಣಕ್ಕೆ ತೆರಳಿದ ಮಕ್ಕಳ ತಂದೆ - ತಾಯಂದಿರ ಬವಣೆಯ ಬದುಕಿನ ಬಗ್ಗೆ, ಅಥವಾ ಪಟ್ಟಣಕ್ಕೆ ಹೋದ ಮಕ್ಕಳ ಬೆನ್ನಿಗೆ ಬಿದ್ದು, ತಾವೂ ಪಟ್ಟಣ ಸೇರಿ, ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಅಂತರ ಪಿಶಾಚಿಯಾದವರ ಬಗ್ಗೆ ಬರೆಯುವ ವಿಚಾರ ಮಾಡುತ್ತೇನೆ.ಆದರೆ ಮರುಕ್ಷಣ ಅದು ನಮ್ಮಲ್ಲೇ ಯಾರಾದರೊಬ್ಬರ ಕಥೆಯಾಗಿ,ಅವರ ಮನ ನೋಯಬಹುದೆಂದು ಕೈಬಿದುತ್ತೇನೆ.ಆದರೆ ಸರಿಯಾಗಿ ಒಮ್ಮೆ ಯೋಚಿಸಿದರೆ, ನಾವು ಬರೆಯುವ ಕಥೆ ಹೇಗಿರಬೇಕು ? ಅದು ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡುವಂತಿರಬೇಕು ತಾನೇ? ಹಾಗಾದಲ್ಲಿ ನಾವು ಏನನ್ನೇ ಬರೆದರೂ ಅದು ಒಂದಲ್ಲಾ ಒಂದು ರೀತಿಯಲ್ಲಿ ಯಾರನ್ನಾದರೂ ತಟ್ಟದೆ ಇರದು.ಆದರೂ ಯಾಕೋ ಬರೆಯುವ ಧೈರ್ಯ ಬರದು .ಆ ಧೈರ್ಯಕ್ಕಾಗಿ ಕಾಯುತ್ತಿದ್ದೇನೆ .

ಹೀಗೆ ಎಷ್ಟೋ ವಿಷಯಗಳು ಮನದ ಮುಂದೆ ಹಾಯ್ದು ಮರೆಯಾಗುತ್ತಿರುತ್ತವೆ.ಎಲ್ಲವು ಕತೆಯಾಗದ ಕಥೆಯಾಗಿ ಉಳಿದುಬಿಡುತ್ತವೆ.

Monday, 24 September 2012

ಸಣ್ಣ ಕತೆ ಗಳಿಗೂ ನನಗು ಎಲ್ಲಿಲ್ಲದ ನಂಟು.ನಾನು ಸರಿಸುಮಾರು ಸಾವಿರದ ಮೇಲೆ ಸಣ್ಣ ಕತೆಗಳನ್ನು ಓದಿರಬಹುದು.ಆದರೆ ನನಗೆ ಈಗಲೂ ಯಾವುದೇ ಕತೆ ಓದುವಾಗಲು ಹೊಸತೇ  ಆದ ಕುತೂಹಲ, ಆಸಕ್ತಿ. ಕೆಲವೇ ಪುಟಗಳಲ್ಲಿ ಏನೆಲ್ಲಾ ಬರೆಯುವ ಸಾಧ್ಯತೆಗಳಿರುವುದು ಸಣ್ಣ ಕತೆ ಯೊಂದಕ್ಕೇ ಎಂಬುದು ನನ್ನ ಅಬಿಮತ. ಹಾಗಾಗಿ ನನಗೆ ಅವುಗಳ ಬಗೆಗೆ ವಿಶೇ ಷ  ಒಲವು.

ನಾನೂ ಕೂಡ ಕತೆ ಬರೆಯಬೀಕೆಂದು ನನಗೆ ಬಹು ದಿನಗಳಿಂದ ಆಸೆ. ಮನಸ್ಸಿನಲ್ಲಿ ಆಸೆ  ಅಂಕುರಿಸಿದಾಗೆಲ್ಲ  ಒಂದು ಕಡೆ  ಬರೆಯುತ್ತಾ  ಹೋಗುತ್ತೇ ನೆ ಯಾಗಲೀ ಯಾವುದೇ ಪತ್ರಿಕೆಗೆ ಕಳಿಸುವ  ದೈರ್ಯ ಮಾಡುವುದಿಲ್ಲ.ಯಾಕೆಂದರೆ ಒಂದೆರಡು ಬಾರಿ ಅಂತ ಪ್ರಯತ್ನ ಮಾಡಿ ಮುಖ ಮಂಗಲಾರತಿಯಾಗಿದೆ.ಆದರೂ ನನಗೆ ಬರೆಯುವ ಆಸೆ .

ನನ್ನ ಕಡತದಲ್ಲಿ ಅದೆಷ್ಟೂ ವಿಷಯಗಳ ಸಂಗ್ರಹವಿದೆ.ಪ್ರತಿ ಬಾರಿ ನನ್ನ ಪ್ರೀತಿಯ ಕತೆ (ಕೊರದ್ಕಲ್ ಶ್ರೀನಿವಾಸರಾಯರ ಧನಿಯರ ಸತ್ಯನಾರಾಯಣ ಮೊದಲಾದವು) ಓದಿದಾಗಲೂ ನನಗೆ ಬರೆಯುವ ಆಸೆ  ಉಕ್ಕೇ ರುತ್ತದೆ .